ತುಮಕೂರು: ಲೋಕಚರಿತ ರಂಗಕೇಂದ್ರ ಚಿಕ್ಕದಾಳವಟ್ಟ ಹಾಗೂ ಸಮ್ಮತ ಥೀಯೇಟರ್ ನಿಂದ ತುಮಕೂರು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜನವರಿ 28 ರ ಮಂಗಳವಾರ ಸಂಜೆ 6 ಗಂಟೆಗೆ ಶಕೀಲ್ ಅಹಮ್ಮದ್ ನಿರ್ದೇಶನದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ ಆಯೋಜಿಸಿಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಲೋಕಚರಿತ ರಂಗಕೇಂದ್ರದ ಕಾರ್ಯದರ್ಶಿ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಮನವಿ ಮಾಡಿದ್ದಾರೆ.

ತಿಂಡಿಗೆ ಬಂದ ತುಂಡೇರಾಯ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಅವರ ” The resistible rise of Arthuro Ui ” ನಾಟಕವನ್ನು ಆಧರಿಸಿದೆ. ಎರಡನೇಯ ವಿಶ್ವಯುದ್ದಕ್ಕೂ ಮೊದಲು ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲ‌ರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಈ ನಾಟಕದ ಎಲ್ಲಾ ಪಾತ್ರಗಳು ಹಾಗೂ ಘಟನೆಗಳು, ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ. ಸಣ್ಣಪುಟ್ಟ ಕೊಲೆ, ಸುಲಿಗೆ, ದರೋಡೆ ಮಾಡಿಕೊಂಡು ಬದುಕಿದ್ದ ತುಂಡೇರಾಯ ಈ ನಾಟಕದ ನಾಯಕ ಪಾತ್ರವಾಗಿದೆ. ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ, ಜನರ ಮನಸ್ಸಿನಿಂದ ಮರೆಯಾಗಲಾರಂಭಿಸುತ್ತದೆ. ಸರ್ಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಭ್ರಷ್ಟ ರಾಜಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ, ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತದೆ. ಇದನ್ನೇ ಮೆಟ್ಟಿಲನ್ನಾಗಿಸಿಕೊಳ್ಳುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು, ದೊಂಬಿ-ಗಲಭೆಗಳನ್ನು ಸೃಷ್ಟಿಸುತ್ತಾ ತನ್ನ ಬುದ್ದಿ ಹಾಗೂ ಬಲಪ್ರಯೋಗದಿಂದ ಅಧಿಕಾರ ಗದ್ದುಗೆ ಹಿಡಿಯುತ್ತಾನೆ. ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗ ಇನ್ನೂ ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತದೆ. ಜನರನ್ನು ಮರುಳು ಮಾಡುತ್ತಾ, ಮರುಳಾಗದ್ದವರನ್ನು ಕೊಲ್ಲುತ್ತಾ, ಒಂದಾದ ಮೇಲೊಂದರಂತೆ ಎಲ್ಲಾ ರಾಜ್ಯಗಳನ್ನು ಕಬಳಿಸುತ್ತಾ, ಅನಭಿಷಿಕ್ತ ದೊರೆಯಾಗಿ ಮೆರೆಯುತ್ತಾನೆ. ಇದು ನಾಟಕದ ಕಥಾ ಹಂದರವಾಗಿದೆ ಎಂದು ವಿವರಿಸಿದ್ದಾರೆ.

ನಾಟಕದ ಸಂಗೀತ ಅನುಷ್ ಶೆಟ್ಟಿ, ಮುನ್ನ ಮೈಸೂರು ನಡೆಸಿಕೊಡಲಿದ್ದಾರೆ. ಶ್ವೇತಾ ರಾಣಿ ಎಚ್. ಕೆ. ರಂಗ ವಿನ್ಯಾಸ / ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

ಸಿದ್ದಪ್ಪ ಮಾದರ, ಮಂಜುನಾಥ ವನಕೇರಿ, ಪಂಪನಗೌಡ ಸಿಂಧನೂರು, ಹನುಮಂತ ನಾಯ್ಕರ್, ಸಂಭ್ರಮ ಸೊನ್ನದ, ರೇಣುಕಾ ವೈ.ಕೆ. ಗಣಪತಿಗೌಡ ಹೊನ್ನಾವರ, ಹನುಮಂತ ಜಿ.ಟಿ, ಯಲ್ಲಪ್ಪ ಹೆಳವರ, ಮುರಳಿ ಕೃಷ್ಣ ಭಜಂತ್ರಿ ನಾಟಕದಲ್ಲಿ ಅಭಿನಯಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ 9481715022 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here