ತುಮಕೂರು: ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದು ಮಾನಸಿಕವಾಗಿ ವಿಚಲಿತನಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಜಗದಾಂಬ ಅವರ ಪುತ್ರ (24) ಭರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆನ್ಲೈನ್ ಗೇಮ್ ನ ಹುಚ್ಚು ಹತ್ತಿಸಿಕೊಂಡಿದ್ದ ಭರತ್ ಇತ್ತೀಚೆಗೆ ಗೇಮ್ ನಲ್ಲಿ 20 ಸಾವಿರ ಹಣ ಕಳೆದುಕೊಂಡಿದ್ದ. ವಿಚಾರ ತಿಳಿದ ತಾಯಿ ಜಗದಾಂಬ ಇನ್ಮುಂದೆ ಆನ್ ಲೈನ್ ಗೇಮ್ ಆಡದಂತೆ ಭರತ್ ಗೆ ಬೈದು ಬುದ್ದಿವಾದ ಹೇಳಿದ್ದರು.
ಇದರಿಂದ ವಿಚಲಿತನಾಗಿದ್ದ ಭರತ್ ತನ್ನ ಮನೆಯ ಬಳಿ ಇದ್ದ ಹಳೆಯ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.